

ಹೋಮ್ | ನಮ್ಮ ಬಗ್ಗೆ | ನಮ್ಮ ಸಿಬ್ಬಂದಿ
SJJES ತನ್ನ ಪ್ರಯಾಣವನ್ನು 1962 ರಲ್ಲಿ ಕೇವಲ ಎರಡು ಶಾಲೆಗಳು ಮತ್ತು ಏಳು ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾರಂಭಿಸಿತು. ಇಂದು, 50 ವರ್ಷಗಳ ನಂತರ, ಸಂಸ್ಥೆಯು ಸುಮಾರು 15,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ ಮತ್ತು ಅದು ಬೆಳೆಯುತ್ತಲೇ ಇದೆ. ಪ್ರಸ್ತುತ, SJJES ಎರಡು ನರ್ಸರಿ ಶಾಲೆಗಳು, ಎರಡು ಪ್ರಾಥಮಿಕ ಶಾಲೆಗಳು, ಎರಡು ಹೈಯರ್ ಪ್ರೈಮರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಮೂರು ಪ್ರೌಢಶಾಲೆಗಳು ಸೇರಿದಂತೆ ಒಂಬತ್ತು ಶಾಲೆಗಳನ್ನು ನಿರ್ವಹಿಸುತ್ತದೆ, ಇವೆಲ್ಲವೂ ಯುವ ಮನಸ್ಸುಗಳನ್ನು ಪೋಷಿಸಲು ಮತ್ತು ಅವರ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. SJJES ತನ್ನ ಶಿಕ್ಷಣ ಕಾರ್ಯಕ್ರಮಗಳನ್ನು ನೀಡಲು ತನ್ನ 80 ಬಲವಾದ ಸಿಬ್ಬಂದಿ ಸದಸ್ಯರನ್ನು ಅವಲಂಬಿಸಿದೆ. ಈ 80 ಸದಸ್ಯರು ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಒಳಗೊಂಡಿರುತ್ತಾರೆ.
36 ವರ್ಷಗಳ ಅನುಭವದೊಂದಿಗೆ, ಶ್ರೀಮತಿ ವೀರಮ್ಮ ಶಿವಕುಮಾರ್ ಅವರು 1988 ರಿಂದ ಜಿವಿಸಿ ಹೈಯರ್ ಪ್ರೈಮರಿ ಶಾಲೆಗೆ (GVCHPS) ಮೂಲಾಧಾರವಾಗಿದ್ದಾರೆ. ಮುಖ್ಯೋಪಾಧ್ಯಾಯಿನಿಯಾಗಿ ಅವರು 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಹಿಂದಿಯನ್ನು ಬೋಧಿಸುತ್ತಾರೆ, ಭಾಷೆ ಮತ್ತು ಕಲಿಕೆಯ ಬಗ್ಗೆ ಆಸಕ್ತಿಯನ್ನು ತುಂಬುತ್ತಾರೆ. ಅವರ ಓದುವ ಹವ್ಯಾಸವು ಬೋಧನೆಗೆ ಪೂರಕವಾಗಿದೆ. ತಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು ಪೋಷಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಅಕ್ಕಮಹಾದೇವಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ವೀರಮ್ಮ, ತಮ್ಮ ಮುಖ್ಯಶಿಕ್ಷಕರ ಪಾತ್ರಕ್ಕೆ ವಿಶಿಷ್ಟವಾದ ದೃಷ್ಟಿಕೋನವನ್ನು ತರುತ್ತಾರೆ. ಶಿಕ್ಷಣಕ್ಕಾಗಿ ಅವರ ಉತ್ಸಾಹ ಮತ್ತು ಸಂಸ್ಥೆಯೊಂದಿಗಿನ ದೀರ್ಘಕಾಲದ ಸಂಬಂಧವು ಸಂಸ್ಥೆಗೆ ಅವರನ್ನು ಅಮೂಲ್ಯ ಆಸ್ತಿಯನ್ನಾಗಿ ಮಾಡಿದೆ.
ಶ್ರೀಮತಿ ಶೈಲಜ .ಎಸ್. ಎಂ ಇವರು 33 ವರ್ಷಗಳಿಂದ ಶ್ರೀ ವೀರಭದ್ರಪ್ಪ ಎಂ ಚಿಗಟೇರಿ ಹಿರಿಯ ಪ್ರಾಥಮಿಕ ಶಾಲೆಯ ಅವಿಭಾಜ್ಯ ಅಂಗವಾಗಿದ್ದಾರೆ. ಇವರು GVCHPS ನರಸರಾಜ ಕ್ಯಾಂಪಸ್ನಲ್ಲಿ ಸಹಾಯಕ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2009 ರಲ್ಲಿ ವಿನೋಬನಗರ ಕ್ಯಾಂಪಸ್ನ, ವಿ ಎಂ ಸಿ ಹೆಚ್ ಪಿ ಎಸ್ (VMCHPS) ಗೆ ಮುಖ್ಯಶಿಕ್ಷಕಿಯಾಗಿ ನೇಮಕಗೊಂಡರು. ಶಿಕ್ಷಣಕ್ಕಾಗಿ ಅವರ ಸಮರ್ಪಣಾ ಮನೋಭಾವವು ಅಸಂಖ್ಯಾತ ಯುವ ಮನಸ್ಸುಗಳನ್ನು ರೂಪಿಸಿದೆ. ಶಿಕ್ಷಕಿಯಾಗಿ, ಅವರು 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡವನ್ನು ಬೋಧಿಸುತ್ತಾರೆ. ಗುಂಪುನೃತ್ಯ, ಹಾಡುಗಾರಿಕೆ, ಚಿತ್ರಕಲೆ ಮತ್ತು ಕರಕುಶಲತೆಯಂತಹ ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಲಿಕಾ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿದ್ದಾರೆ.
1982-1985ರ ಬ್ಯಾಚ್ನ ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯ (AGHS) ಹಳೆಯ ವಿದ್ಯಾರ್ಥಿನಿಯಾಗಿರುವ ಶ್ರೀಮತಿ ಶೈಲಜ ತಮ್ಮ ಬೋಧನೆಯಲ್ಲಿ ಶಿಕ್ಷಣದ ಮೌಲ್ಯಗಳನ್ನು ಸಾಕಾರಗೊಳಿಸಿರುತ್ತಾರೆ. ಇವರ ವಿನೂತನ ಬೋಧನಾ ವಿಧಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿದೆ. ಅವರ ಬಹುಮುಖ ಪ್ರತಿಭೆಯ ಮೂಲಕ ಶಾಲೆಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ನೀಡುವ ಆದ್ಯತೆಯು ಅವರನ್ನು ಸಂಸ್ಥೆಯಲ್ಲಿ ಪ್ರಮುಖ ವ್ಯಕ್ತಿಯನ್ನಾಗಿ ಮಾಡುತ್ತದೆ.
26 ವರ್ಷಗಳ ಶಿಕ್ಷಣದ ಅನುಭವ ಹೊಂದಿರುವ ಶ್ರೀ ಸುರೇಶನಾಯ್ಕ್ ಇವರು ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. M.A., B.Ed ಪದವಿಗಳನ್ನು ಹೊಂದಿರುವ ಇವರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ವಿಷಯವನ್ನು ಬೋಧಿಸುತ್ತಾರೆ ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ವಿಶೇಷ ಆಸಕ್ತಿವಹಿಸುತ್ತಾರೆ. ಅವರ ವೃತ್ತಿಪರ ಪಾತ್ರವನ್ನು ಮೀರಿ ಉತ್ಸಾಹಿ ಗಾಯಕ, ನಟ, ಕಥೆಗಾರ ಮತ್ತು ಕವಿಗಳಾಗಿದ್ದಾರೆ. ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ. ಅವರ ಸೃಜನಶೀಲ ಮನೋಭಾವ ಮತ್ತು ಶಿಕ್ಷಣದ ಬದ್ಧತೆಯು ಅವರನ್ನು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯವರಿಗೂ ಸ್ಪೂರ್ತಿದಾಯಕ ನಾಯಕನನ್ನಾಗಿ ಮಾಡುತ್ತದೆ.
ಶ್ರೀ ನಾಗರಾಜ ಎಸ್ ಅವರು ನಮ್ಮ ಸಂಸ್ಥೆಗಳಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಈ ಸಮಯದಲ್ಲಿ ಇವರು 13 ವರ್ಷಗಳ ಕಾಲ ಶಾಲೆಯನ್ನು ಮುಖ್ಯೋಪಾಧ್ಯಾಯರಾಗಿ ಮುನ್ನಡೆಸಿದ್ದಾರೆ. 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯವನ್ನು ಉತ್ಕೃಷ್ಟವಾಗಿ ಬೋಧಿಸುತ್ತಾರೆ. ಬೋಧನೆಯ ಜೊತೆಗೆ ಅವರ ಆಸಕ್ತಿ ಕ್ರೀಡೆಗಳು, ಪುಸ್ತಕಗಳು ಮತ್ತು ಸಂಗೀತದ ಮೇಲಿದ್ದು, ಇದನ್ನು ಅವರು ಆಗಾಗ್ಗೆ ಶಿಕ್ಷಣ ಕಲಿಸುವ ವಿಧಾನದಲ್ಲಿ ಬಳಸುತ್ತಾರೆ. ತರಗತಿಯ ಒಳಗೆ ಮತ್ತು ಹೊರಗೆ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಹಾಯ ಮಾಡಲು ಶ್ರೀ ನಾಗರಾಜ ಅವರು ಎಂದಿಗೂ ಸಿದ್ದರಿರುತ್ತಾರೆ. ಪ್ರವಾಸ ನಾಯಕತ್ವ, ಅಡಿಗೆ ತಯಾರಿಕಾ ಜವಾಬ್ದಾರಿ ಮೊದಲಾದ ಯೋಜನೆಗಳಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ.
ಅವರ ನಾಯಕತ್ವದಲ್ಲಿ ಶಾಲೆಯು ಬಹಳಷ್ಟು ಬೆಳೆದ್ದಿದ್ದು. ಅವರ ಬೋಧನಾ ವಿಧಾನವು ವಿದ್ಯಾರ್ಥಿಗಳಿಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಧೃಢರನ್ನಾಗಿಸುತ್ತದೆ.
17 ವರ್ಷಗಳ ಅನುಭವ ಹೊಂದಿರುವ ಶ್ರೀ ನಿಂಗಪ್ಪರವರು ಗುರುಬಸಮ್ಮ ವಿ .ಚಿಗಟೇರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು. ಸಮರ್ಪಣಾ ಮನೋಭಾವದ ಶಿಕ್ಷಕರಾಗಿರುವ ಇವರು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನವನ್ನು ಕಲಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಪುಸ್ತಕ ಓದುವುದು, ಬೋಧನೆ ಮತ್ತು ಕ್ರೀಡೆಗಳು ಇವರ ಹವ್ಯಾಸಗಳಾಗಿವೆ. ಬೈಕ್ ಸವಾರಿ ಮತ್ತು ಪಿಕ್ನಿಕ್ಗಳಂತಹ ಪಠ್ಯೇತರ ಚಟುವಟಿಕೆಗಳೊಂದಿಗೆ ಅವರ ಬೋಧನಾ ವಿಧಾನವು ವರ್ಣರಂಜಿತಾ ಕಲಿಕಾ ವಾತಾವರಣವನ್ನು ಸೃಷ್ಠಿಸುತ್ತದೆ.
ಶ್ರೀ ನಿಂಗಪ್ಪ ಅವರ ನಾಯಕತ್ವ ಮತ್ತು ಬಹುಮುಖಿ ಆಸಕ್ತಿಗಳು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ವೈಯಕ್ತಿಕವಾಗಿ ಬೆಳೆಯಲು ಪ್ರೇರೇಪಿಸುತ್ತವೆ. ಕಳೆದ ಐದು ವರ್ಷಗಳಿಂದ ಇವರ ಸಂಪಾದಕೀಯದಲ್ಲಿ SJJES ನ "ವಿದ್ಯಾವರಣ" ಮಾಸಿಕ ಪತ್ರಿಕೆ ಯಶಸ್ವಿಯಾಗಿ ಹೊರ ಬರುತ್ತಿದ್ದು, ಹೊಸ ಯುವ ಮನಸ್ಸುಗಳನ್ನು ಪೋಷಿಸುವಲ್ಲಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಪ್ರೇರೇಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿರುತ್ತಾರೆ.
ದಾವಣಗೆರೆಯ ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ಟಿ. ಮಳಗಿಯವರು, ಸುಮಾರು 34 ವರ್ಷಗಳ ಸೇವೆಯನ್ನು ಪ್ರೌಢಶಾಲಾ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯ ಬೋಧನೆಯಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆಯ ನರಸರಾಜ ಕ್ಯಾಂಪಸ್ ನ ಸಲಹೆಗಾರರಾಗಿ ತಮ್ಮ ಶೈಕ್ಷಣಿಕ ಸೇವೆಯನ್ನು ಮುಂದುವರೆಸಿದ್ದಾರೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅವರ ಬದ್ಧತೆಯ ಕಾರಣದಿಂದಾಗಿ ಹೆಸರುವಾಸಿಯಾಗಿರುವ ಅವರು ಯೂತ್ ಪಾರ್ಲಿಮೆಂಟ್ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಎಸ್ಎಸ್ಎಲ್ಸಿ ಮೌಲ್ಯಮಾಪನಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರಮುಖ ಪಾತ್ರವಹಿಸಿದ್ದಾರೆ.
ಶೈಕ್ಷಣಿಕ ಮತ್ತು ಸಾಹಿತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಗೌರವ ಉಪಾಧ್ಯಕ್ಷರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಣ್ಣ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಿದ ಕಾರಣ ಸರ್ಕಾರವು ಪುರಸ್ಕಾರವನ್ನು ನೀಡಿ ಗುರುತಿಸಿದೆ. ಶಿಕ್ಷಣಕ್ಕೆ ಅವರ ಕೊಡುಗೆಗಳನ್ನು ಪರಿಗಣಿಸಿ ಜೀವಿತಾವಧಿಯ ಸೇವೆಗಾಗಿ ದಾವಣಗೆರೆ ಮಹಾನಗರ ಪಾಲಿಕೆಯು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀಮತಿ ವಾಗ್ದೇವಿ ರಾಮಚಂದ್ರರಾವ್ ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯ (ಅಲುಮ್ನಿ AGHS) ಹಳೆಯ ವಿದ್ಯಾರ್ಥಿನಿ, 1979 ರಲ್ಲಿ SJJES ಗೆ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡ ಇವರು ಡಿಸೆಂಬರ್ 2014 ರಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ (SJJMHS) ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತರಾದರು. ತಮ್ಮ 35ವರ್ಷಗಳ ಸೇವಾವಧಿಯಲ್ಲಿ, ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ವಿಶೇಷವಾಗಿ ಗರ್ಲ್ ಗೈಡ್ಸ್ ನ ವುಡ್ ಬ್ಯಾಡ್ಜ್ ತರಭೇತಿ ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಪತಿ ಪುರಸ್ಕಾರಗಳು ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಲು ಸಹಾಯ ಮಾಡಿತು. 1982ರಲ್ಲಿ ಅಕ್ಕಮಹಾದೇವಿ ಯೋಗ ಶಾಲೆಯ ಆರಂಭಿಕ ವಿದ್ಯಾರ್ಥಿನಿಯಾಗಿದ್ದು, ಬಹಳಷ್ಟು ಜಿಲ್ಲಾ,ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಾ, ವಿದ್ಯಾರ್ಥಿಗಳಿಗೆ ಸ್ವಯಂ ಸ್ಪೂರ್ತಿಯಾಗಿರುತ್ತಾರೆ. ವಿಜ್ಞಾನ ಶಿಕ್ಷಣಕ್ಕೆ ಅವರ ಬದ್ಧತೆಯು KRVP ನಡೆಸುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಾಜೆಕ್ಟ್ ತಯಾರಿಕಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ, ಗೌರವಗಳನ್ನು ಸಾಧಿಸಲು ಕಾರಣವಾಯಿತು, ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಉದ್ಘಾಟಿಸಿದ ಅಂತರರಾಷ್ಟ್ರೀಯ ಹಿರಿಯ ವಿಜ್ಞಾನಿಗಳ ಸಮ್ಮೇಳನದಲ್ಲಿ ಇವರ ಒಬ್ಬ ವಿದ್ಯಾರ್ಥಿನಿಯೊಂದಿಗೆ ಕರ್ನಾಟಕವನ್ನು ಪ್ರತಿನಿಧಿಸಿ, ರಾಷ್ಟ್ರ ಮಟ್ಟದಲ್ಲಿ ಶಾಲಾ ಘನತೆಯನ್ನು ಹೆಚ್ಚಿಸಿರುತ್ತಾರೆ.
ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ಬೋರ್ಡ್ ನ ಪಬ್ಲಿಕ್ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ರಚನಾಕಾರರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಶಾಲಾ ಸಂಬಂಧಿತ ವಿವಿಧ ಪಠ್ಯೇತರ, ಕ್ರೀಡಾ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಶ್ರೀಮತಿ ವಾಗ್ದೇವಿಯವರ ಈ ಎಲ್ಲಾ ಕೊಡುಗೆಗಳಿಗೆ ರಾಜ್ಯ ಸರ್ಕಾರ ನೀಡುವ " ಅತ್ಯುತ್ತಮ ಶಿಕ್ಷಕ ಪ್ರಶಸ್ತಿ " ಹಾಗೂ "ವಿಶೇಷ ವಿಜ್ಞಾನ ಶಿಕ್ಷಕ ಪ್ರಶಸ್ತಿ"ನೀಡಿ ಗೌರವಿಸಲಾಗಿದೆ. ನಿವೃತ್ತಿಯ ನಂತರ, ಅವರು ಶೈಕ್ಷಣಿಕ ಸಲಹೆಗಾರರಾಗಿ SJJES ಗೆ ಪುನಃ ನೇಮಕಗೊಂಡು, ಪ್ರಸ್ತುತ ವಿನೋಬನಗರ ಕ್ಯಾಂಪಸ್ನ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿದ್ದಾರೆ.
SJJES was founded in Davanagere in 1962 by Sree Veerabhadrappa M. Chigateri and others, to provide affordable education to all members of society without any profit motive.